Monday 4 June 2012

ವಚನ ಸಿಂಚನ ೪೦:ಇವನಮ್ಮವ

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ,
ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ,
ಕೂಡಲಸಂಗಮದೇವಾ,ನಿಮ್ಮ ಮನೆಯ ಮಗನೆಂದೆನಿಸಯ್ಯಾ...
                                               -ಬಸವಣ್ಣ
ಈ ವಚನವನ್ನು,೧೨ನೆ ಶತಮಾನದಲ್ಲಿದ್ದ ಅಸ್ಪ್ರುಶ್ಯತೆಯನ್ನು ಹೋಗಲಾಡಿಸಲು ಶಿವ ಶರಣರು ಹೋರಾಡಿದ ಸಾಕ್ಷಿ ಅಥವಾ ಕುರುಹು ಎನ್ನಬಹುದು.ಅನ್ಯ ಜಾತಿಯವರನ್ನು ಮತ್ತು ಹೊರಗಿನವರನ್ನು ಕೂಡ ಅವರ ಜಾತಿಯನ್ನು ತಿಳಿದುಕೊಂಡು ಅದರ ಆಧಾರದ ಮೇಲೆ ಅವರಿಗೆ ಆತಿಥ್ಯ ನೀಡಲಾಗುತ್ತಿದ್ದಂತಹ ಒಂದು ಕೆಟ್ಟ ಆಚರಣೆಯನ್ನು ಇಲ್ಲಿ ಬಸವಣ್ಣನವರು ವಿರೋಧಿಸುತ್ತಾರೆ.ಆದ್ದರಿಂದ ಹೇಳುತ್ತಾರೆ,ಯಾರೊಬ್ಬರನ್ನು ಕೂಡ ಅವರ ಜಾತಿ ಮತವನ್ನು ತಿಳಿದು ದೂರ ತಳ್ಳುವುದು ತರವಲ್ಲ,ಎಲ್ಲಾ ಶಿವ ಶರಣರನ್ನು ನಮ್ಮವನು ಎಂದು ಭಾವಿಸಿ ಸತ್ಕಾರ ಮಾಡಬೇಕು ಎಂದು..ಈ ಜಗತ್ತು ಒಂದು ಮನೆ ಇದ್ದ ಹಾಗೆ,ಶಿವನ ಸ್ವರೂಪವಾದ ಕೂಡಲಸಂಗಮದೇವನೇ ಇದರ ಒಡೆಯ..ಆದ್ದರಿಂದ ಸಂಗಮನಾಥನಲ್ಲಿ ಪ್ರತಿಯೊಬ್ಬರನ್ನು ತಮ್ಮ ಮನೆಯ ಮಗನೆಂದೆನಿಸಿ ಎಲ್ಲರನ್ನು ಸಮಾನವಾಗಿ ಸ್ವೀಕರಿಸಿ ಸಂತೈಸಿ ಎಂದು ಬೇಡಿಕೊಳ್ಳುತ್ತಾರೆ.

ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡು ಎಲ್ಲರಿಗೂ ಮುಕ್ತ ಅವಕಾಶ ನೀಡಿ ಅನುಭವ ಮಂಟಪದಲ್ಲಿ ಭಾಗಿಯಾಗಿವಂತೆ ಮಾಡಿ ಕಲ್ಯಾಣದಲ್ಲಿ ಕಾಯಕ ಕ್ರಾಂತಿ ಮಾಡಿ ೧೨ನೆ ಶತಮಾನದ ಸಾಮಾಜಿಕ ಕ್ರೌರ್ಯಗಳ ವಿರುದ್ಧ ಹೋರಾಡಿದ ಬಸವಣ್ಣನವರ ಸಾಮಾಜಿಕ ಕಳವಳಿಯ ಒಂದು ಅದ್ಭುತ ವಚನ.ಇಡೀ ವಿಶ್ವವನ್ನೇ ಒಂದು ಎಂದು ಭಾವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..

No comments:

Post a Comment