Thursday 24 January 2013

ವಚನ-ಸಿಂಚನ ೬೦:ಶರಣ ಸತಿ - ಲಿಂಗ ಪತಿ

ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗ ಅತಿಘೋರ ನರಕ !
ಶರಣ ಸತಿ - ಲಿಂಗ ಪತಿಯಾದ ಬಳಿಕ
ಶರಣಂಗೆ ಸತಿಸಂಗ ಅತಿಘೋರ ನರಕ !
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣ ಅಳಿಯದವರ ಸಂಗವೇ ಭಂಗ !
                                              -ಅಕ್ಕಮಹಾದೇವಿ

ಈ ವಚನದಲ್ಲಿ ಅಕ್ಕಮಹಾದೇವಿ ಶರಣ ಸತಿ-ಲಿಂಗ ಪತಿ ಎಂಬ ಅಂಶವನ್ನು ಪ್ರತಿಪಾದಿಸುತ್ತಾಳೆ.ಅಲ್ಲದೆ ತಾನೂ ಕೂಡ ಅದೇ ರೀತಿ ಬದುಕಿದವಳು ಅಕ್ಕ.ಚೆನ್ನಮಲ್ಲಿಕಾರ್ಜುನನೇ  ತನ್ನ ಪತಿ ಎಂದು ಭಾವಿಸಿ ಶಿವ ಸ್ವರೂಪವಾದ ಲಿಂಗವನ್ನು ಆರಾಧಿಸಿದವಳು  ಅಕ್ಕ...

ಲೌಕಿಕ ಸುಖವನ್ನು ಬಿಟ್ಟು ಸಂಸಾರ ಬಂಧನಕ್ಕೆ ಹೊಳಗಾಗದೆ ಎಲ್ಲವನ್ನೂ ತೊರೆದು ಶಿವ ಭಕ್ತನಾದ ಮೂರ್ತರೂಪನು,ಮತ್ತೆ ಭವಿಯ ಸಂಗವನ್ನು ಬಯಸುವುದು ನರಕವಿದ್ದಂತೆ ಎಂದು ಹೇಳುವ ಅಕ್ಕಮಹಾದೇವಿ ಮುಂದುವರೆಸುತ್ತಾ ಭಕ್ತನೇ ಸತಿ,ಲಿಂಗವೇ ಪತಿ ಎಂದು ಭಾವಿಸಿರುವ ಭಕ್ತನಿಗೆ ಹೆಣ್ಣಿನ ಮೇಲೆ ವ್ಯಾಮೋಹ ಆದರೆ ಅದು ಘೋರ ತಪ್ಪು,ಅದು ನರಕವಿದ್ದಂತೆ ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳುತ್ತಾಳೆ..
ಲಿಂಗೈಕ್ಯಂಗೆ  ಅಂದರೆ ಲಿಂಗದೊಡನೆ ಸಂಭದ ಬೆಸೆಯುವವನು ಅಂದರೆ ಲಿಂಗದೊಡನೆ ಒಂದುಗೂಡುವವನಿಗೆ ಪ್ರಾಣಗುಣ ಅಳಿಯದವರ ಅಂದರೆ ಆತ್ಮವನ್ನು,ಪ್ರಾಣವನ್ನು ಬಿಡಲು ಒಲ್ಲದವನ ಸಂಗವೇ ಅಡಚಣೆ  ಇದ್ದ ಹಾಗೆ ಹೇಳುತ್ತಾ ಅಂಥವನ ಸಂಗದಿಂದ ಹೊರಬಂದರೆ ಮಾತ್ರ ಭಕ್ತನೊಬ್ಬ ದೇವರನ್ನು ಕಾಣಲು ಸಾಧ್ಯ ಎಂದು ಅಕ್ಕಮಹಾದೇವಿ ಹೇಳುತ್ತಾಳೆ...

ಅಕ್ಕಮಹಾದೇವಿ ಕೂಡ ಸಂಸಾರ ಬಂಧನದಿಂದ ಹೊರ ಬಂದು ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಆಧ್ಯಾತ್ಮದ ಮೂರ್ತಿಯಾಗಿ ಮೆರೆದವಳು...

 

Monday 14 January 2013

ವಚನ ಸಿಂಚನ ೫೯:ಆಸೆ-ಆಮಿಷ ಮತ್ತು ಭಕ್ತಿ

ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ
                                       -ಅಲ್ಲಮಪ್ರಭು


ಈ ವಚನದಲ್ಲಿ ಅಲ್ಲಮ ಪ್ರಭು ಮನುಷ್ಯ ಆಸೆಗಳ ಬೆನ್ನತ್ತಿ  ಹೋಗುವ ಅವನ ದುರ್ಭುದ್ದಿಯನ್ನು ವಿವರಿಸುತ್ತಾನೆ... ಮನುಷ್ಯ ಆಸೆ ಮತ್ತು ಪರನೊಬ್ಬ ನೀಡುವ  ಆಮಿಷಕ್ಕೆ ತನ್ನ ನೈತಿಕತೆ ಯನ್ನು ಕಳೆದು ಕೊಳ್ಳುತ್ತಿದ್ದಾನೆ.ಈ ರೀತಿ ಆಸೆ ಆಮಿಷಕ್ಕೆ ಬಲಿ  ಆದವರು ಕೋಟಿಗಟ್ಟಲೆ ಜನರು...ಇದೆ ರೀತಿ ಹೊನ್ನು,ಹೆಣ್ಣು,ಮಣ್ಣಿನ ಹಿಂದೆ ಹೋಗಿ ನೂರಾರು ಜನ ಬಲಿಯಾದರು.. ಈ  ವಚನದಲ್ಲಿ ಸತ್ತುದು ಕೋಟಿ ಅಂದರೆ ಮನುಷ್ಯನ ನೈತಿಕತೆ ,ಅವನ ಧರ್ಮ ಮತ್ತು ಸಂಸ್ಕಾರ ಎಂದು ಅರ್ಥೈಸಿಕೊಳ್ಳಬಹುದು... ಹೀಗೆ ಹೇಳುತ್ತಾ ಗುಹೇಶ್ವರನಲ್ಲಿ ನಿನಗಾಗಿ ಸತ್ತವರು ಒಬ್ಬರೂ ಇಲ್ಲ ಎಂದು ಹೇಳುತ್ತಾನೆ..ಅಂದರೆ ಇಲ್ಲಿ ಗುಹೇಶ್ವರನಲ್ಲಿ ಭಕ್ತಿಯನ್ನು ಅರಸಿಕೊಂಡು ಹೋದವನು ಒಬ್ಬನೂ ಇಲ್ಲ ಅಥವಾ ದೇವರನ್ನು ಕಂಡುಕೊಳ್ಳುವ ಪ್ರಯತ್ನವನ್ನು ಒಬ್ಬನೂ  ಮಾಡಲಿಲ್ಲ ಎಂದು ಅಲ್ಲಮ ವಿಷಾದ ವ್ಯಕ್ತ ಪಡಿಸುತ್ತಾನೆ...

ಅಂದರೆ ಈ ವಚನದಲ್ಲಿ ಅಲ್ಲಮ ಭಕ್ತಿಯ ಮಾರ್ಗದೆಡೆ ಹೋಗಿ ಎಂದು ವಿನಂತಿಸಿ ಕೊಳ್ಳುವ ಹಾಗೆ ಇದೆ...

ಹೆಣ್ಣು,ಹೊನ್ನು ,ಮಣ್ಣು ಇವುಗಳನ್ನು ಮಾಯೆ ಎಂದು ಹೇಳುತ್ತಾ ಇವೆಲ್ಲದಕ್ಕಿಂತ ಮನದ ಆಸೆಯೇ ಮಾಯೆ ಎಂದು  ಅಲ್ಲಮ  ತನ್ನಇನ್ನೊಂದು  ವಚನದಲ್ಲಿ ಹೇಳುತ್ತಾನೆ...ಇದೆ ರೀತಿ ಹಲವಾರು ವಚನಕಾರರು ಈ ಮೂರು ವಸ್ತುಗಳನ್ನು ತಮ್ಮ ವಚನದಲ್ಲಿ ಬಳಸಿಕೊಂಡಿದ್ದಾರೆ ಮತ್ತು ಇದಕ್ಕೆ ಸಮನಾದ ಭಾವವನ್ನೇ ಅವರುಗಳು ನೀಡಿದ್ದಾರೆ...