Monday 18 February 2013

ವಚನ ಸಿಂಚನ ೬೩:ಆತಿಥ್ಯ

ಏನು ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ  ಹೊಹುದೇ?
ಕುಳ್ಳಿರೆಂದಡೆ ನೆಲಕುಳಿ ಹೊಹುದೇ?
ಒಡನೆ ನುಡಿದಡೆ ಸಿರ,ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ
ಕೂಡಲಸಂಗಮದೇವಯ್ಯಾ !!!
                               -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ..ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ...ಅದೇ ರೀತಿ ಅವರನ್ನು ಕುಳಿತು ಕೊಳ್ಳಲು ಆಹ್ವಾನ ನೀಡಿದರೆ,ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾನೆ...

ಮೂಗ ಕೊಯ್ಯದೆ ಬಿಡುವನೆ ಎಂದರೆ ಅಂಥವರು ಶಿಕ್ಷಾರ್ಹರು ಎಂದು ಹೇಳುತ್ತಾ ಅಂಥವರು ದೇವರ ಒಲುಮೆಗೆ ಪಾತ್ರರಾಗುವುದಿಲ್ಲ ಎಂದು ಬಸವಣ್ಣ ಹೇಳುತ್ತಾರೆ.

ಇವನಾರವ ಎಂದೆನಿಸದೆ,ಇವನಮ್ಮವ ಎಂದೆನಿಸಯ್ಯಾ ಎಂದು ತನ್ನ ಇನ್ನೊಂದು ವಚನದಲ್ಲಿ ಎಲ್ಲ ವರ್ಗದ ಜನರನ್ನು ಆದರದಿಂದ ಕಾಣು  ಎಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ನೀಡಿರುವಂತೆ ಇಲ್ಲಿ ಕೂಡ ಆದರಾತಿಥ್ಯ ಶರಣರ ಗುಣ ಲಕ್ಷಣ ಎಂದು ಸಂಭೋಧಿಸುತ್ತಾನೆ...

Monday 11 February 2013

ವಚನ ಸಿಂಚನ ೬೨:ಮಡಿ ಮೈಲಿಗೆ ಮತ್ತು ಲಿಂಗ

ಆವವನಾದಡೇನು,
ಶ್ರೀ ಶಿವಲಿಂಗ ದೇವರು ಅಂಗದ ಮೇಲೆ ಉಳ್ಳವರ
ಬಾಯ ತಾಂಬೂಲ ಮೆಲುವೆನು,
ಬಿಲ್ಲುಡೆಯ ಹೊದೆವೆನು,
ಪಾದರಕ್ಷೆಯ ಕಾದು  ಬದುಕುವೆನು,
ನಮ್ಮ ಕೂಡಲಸಂಗಮದೇವ ಅಂಗದಿಂದ ತೊಲಗದೆ ನೆನೆವವರ...
                                         -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಸಾಂಪ್ರದಾಯಿಕೆ ಮಡಿ ಮೈಲಿಗೆಗಳು  ಅರ್ಥಹೀನ ಎಂದು ಸ್ಪಷ್ಟಪಡಿಸುತ್ತಾರೆ..ಬಸವಣ್ಣನ ಪ್ರಕಾರ ದೈವ ಸಂಕೇತವೂ,ಸಮಾನತೆಯ ಸಂಕೇತವೂ ಆದ ಇಷ್ಟ ಲಿಂಗವನ್ನು ಧರಿಸಿದರೆ  ಅಂಥವನಿಗೆ ಈ ಮಡಿ ಮೈಲಿಗೆಗಳ ಜಂಜಾಟವಿಲ್ಲ ಎಂದು ಹೇಳುತ್ತಾರೆ...ಲಿಂಗ ಧರಿಸಿದವರೆಲ್ಲರು ಉಚ್ಚರು,ಯಾವುದೇ ಬೇಧ ಭಾವವಿಲ್ಲದ ಸಮಾನರು ಅವರು ಎಂದು ಪುಷ್ಟಿಕರಿಸುತ್ತಾ ಅವರಲ್ಲಿ ಯಾವುದೇ ಅಂತರವಿಲ್ಲ ಎಂದು ವಿವರಿಸಲು ಕೆಲವು ನಿದರ್ಶನಗಳನ್ನು ಕೊಡುತ್ತಾರೆ..

ಒಬ್ಬ ವ್ಯಕ್ತಿ ಅಗೆದ ತಾಂಬೂಲ ಇನ್ನೊಬ್ಬನಿಗೆ ಶುಚಿಕರವಲ್ಲ ಮತ್ತು ಅದು ಆತನ ಎಂಜಲು ಎಲ್ಲ ಬೇರೆತದ್ದರಿಂದ ಅದು ಮಲೀನವಾದದ್ದು.ಆದರ ಬಸವಣ್ಣ ಹೇಳುತ್ತಾರೆ ಲಿಂಗಧಾರಿಯೊಬ್ಬ ಅಗೆದು ಬಿಟ್ಟ ತಾಂಬೂಲವನ್ನು  ತಾನು ತಿನ್ನಲು ಸಿದ್ಧ ಎಂದು ಆತ ಅಸ್ಪ್ರುಶ್ಯನೆ ಆಗಿರಲಿ,ಕೆಳ ಜಾತಿಯವನೇ ಆಗಿರಲಿ ಆತ ಲಿಂಗಧಾರಿಯಾಗಿದ್ದರೆ ಆತನ ಬಾಯಿಂದ ತಾಂಬೂಲವನ್ನು  ತಿನ್ನಬಲ್ಲೆ ಅಂದರೆ, ಇಲ್ಲಿ ಎಂಜಲಾದರೇನು ಮಾನಸಿಕ ಶುಚಿರ್ಭೂತರಾದರೆ ಎಲ್ಲವೂ ಶ್ರೇಷ್ಠ  ಎಂದು ಬಸವ ಹೇಳಬೇಕಾದರೆ ಆತನ ಉದ್ದೇಶ ಈ ಮೈಲಿಗೆ ಸಂಪ್ರದಾಯವನ್ನು ಹೋಗಲಾಡಿಸುವುದು ಮತ್ತು ಅದನ್ನು ವಿರೋಧಿಸುವುದು...

 ಅದೇ ರೀತಿ ,ತಾನು ಇನ್ನೊಬ್ಬ ಉಟ್ಟು ಬಿಟ್ಟ ಮಲೀನವಾದ ಬಟ್ಟೆಯನ್ನು ಉಡಲು ಸಿದ್ಧ ಮತ್ತು ಬೇರೆಯವರ ಪಾದರಕ್ಷೆಗಳನ್ನು ಕಾದು ಜೀವನ ಮಾಡಬಲ್ಲೆ,ಅವರು ಯಾವ ಕುಲದವನೇ  ಆಗಿರಲಿ,ಅವರು ಲಿಂಗಧಾರಿಗಳಾಗಿದ್ದರೆ ಸಾಕು ಅವರೆಲ್ಲರೂ ಸಮಾನರು ಎಂದು ಹೇಳುತ್ತಾ ಇಷ್ಟಲಿಂಗವನ್ನು ಸಾಮಾಜಿಕ ಸಮಾನತೆಯ ಕುರುಹು ಎಂದು ಬಿಂಬಿಸುತ್ತಾರೆ.

ಲಿಂಗವನ್ನು ಅಂಗದಲ್ಲಿ ಧರಿಸುವವರು ಎಂದಿಗೂ ದೇವರಿಂದ ಬೇರ್ಪಡುವುದಿಲ್ಲ,ದೇವರೊಡನೆ ಬೆಸುಗೆ ಎಂದಿಗೂ ಇರುತ್ತದೆ,ಅಂಥವರ ಬಾಯಿಂದ ತಾಂಬೂಲವನ್ನು ಪಡೆಯಲು,ಅವರು  ಉತ್ತ ಬಟ್ಟೆಯನ್ನು ತೊಡಲು,ಅವರ ಪಾದರಕ್ಷೆಗಳನ್ನು ಕಾಯಲು ಸಿದ್ಧ,ಇಂಥ ಹೊಂದಾಣಿಕೆಗೆ ಇಳಿಯಲು ಸಿದ್ಧ ಎಂದು ಹೇಳುವ ಪರಿಭಾಷೆಯ ಹಿಂದೆ ಸಮಾನತೆಯ ಸಾರುವ ಉದ್ದೇಶ ಎದ್ದು ಕಾಣುತ್ತದೆ..
ಮತ್ತು ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ,ಇಲ್ಲಿ ನೀಡಿರುವ ನಿದರ್ಶನಗಳಲ್ಲಿ ಉತ್ಕಟತೆ ಮತ್ತು ತೀಕ್ಷ್ಣತೆ ಒಂದಕ್ಕಿಂತ ಒಂದರಲ್ಲಿ ಹೆಚ್ಚುತ್ತಾ ಹೋಗುತ್ತದೆ..

 

Monday 4 February 2013

ವಚನ ಸಿಂಚನ ೬೧: "ವೀರ" ಶೈವ

 ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
ಎಲುದೋರೆ ಸರಸವಾಡಿದಡೆ   ಸೈರಿಸಬೇಕಯ್ಯಾ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕ ಒಲಿವ ಕೂಡಲಸಂಗಮದೇವಾ !!!
                       -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು,ಶಿವನನ್ನು ಒಲಿಸಿಕೊಳ್ಳಬೇಕಾದರೆ ವೀರತೆಯ,ಶೌರ್ಯತೆಯ ಪ್ರದರ್ಶನ ಕೆಲವೊಮ್ಮೆ ಅನಿವಾರ್ಯ ಆಗಬಹುದು ಎಂದು ವಿವರಿಸುತ್ತಾರೆ...ಪ್ರತಿಯೊಬ್ಬ ಶಿವಶರಣನು ವೀರನ ಕೈಯ ಖಡ್ಗದಂತಿರಬೇಕು, ಚರ್ಮ ಸುಲಿದು ಮೂಳೆ ಕಾಣಿಸುವಂತಿದ್ದರೂ ಅದನ್ನು ಸೈರಿಸಿಕೊಳ್ಳುವಂತಿರಬೇಕು,ಯುದ್ಧದಲ್ಲಿ ರುಂಡ ಮುಂಡ  ಬೇರೆ ಬೇರೆಯಾಗಿ ,ತಲೆಯು ವೀರ ಯೋಧನ ಹಾಗೆ "ಹರ ಹರ ಮಹಾದೇವಾ" ಎಂದು ಬೊಬ್ಬೆ ಇಟ್ಟಾಗ ಕೂಡಲಸಂಗಮದೇವ ಒಲಿಯುತ್ತಾನೆ ಎಂದು ಬಸವಣ್ಣ ಹೇಳುತ್ತಾರೆ.

ಈ ವಚನದಲ್ಲಿ ಗಮನಿಸಬೇಕಾದ ಒಂದು ಅಂಶ ಅಂದರೆ,೧೨ನೆ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಸಾಮಾಜಿಕ ಪರಿಸ್ಥಿತಿ,ಕಲ್ಯಾಣ ಕ್ರಾಂತಿಯ ಹಿನ್ನೆಲೆಯಲ್ಲಿ ಶಿವ ಶರಣರಿಗೆ ಬಿಜ್ಜಳ ಅರಸನ ಕಡೆಯವರಿಂದ ಉಪಟಳ ಬಹಳ ಇತ್ತು..ಆದ್ದರಿಂದ ತಮಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಬರಬಹುದೆಂಬ ನಿರೀಕ್ಷೆಯಲ್ಲಿ ಬಸವಣ್ಣ ಕಲ್ಯಾಣದ ಶರಣರಿಗೆ ಎಚ್ಚರಿಕೆ ನೀಡಿದಂತಿದೆ ಈ ವಚನ...ಹರಳಯ್ಯ ಮತ್ತು ಮಧುವರಸನನ್ನು ಕೊಂದಿದ್ದು ಶರಣರಿಗೆ ನೀಡಿದ ತೊಂದರೆಯ ಒಂದು  ನಿದರ್ಶನ..

ಇನ್ನೊಂದು ಸಂಗತಿ ಅಂದರೆ ಶಿವನ ಆರಾಧಕರಾದ ಶೈವರು ಬಸವಣ್ಣನ ಕಾಲಕ್ಕೂ ಹಿಂದಿನಿಂದಲೂ ಇದ್ದರು ಮತ್ತು ಆ ಧರ್ಮವನ್ನು ಬಸವಣ್ಣ ಕೆಲವು ರೂಪುರೇಷೆಗಳಿಂದ ಪುನಶ್ಚೇತನಗೊಳಿಸಿದರು ಎಂದರೆ ತಪ್ಪಾಗಲಾರದು..ಇಷ್ಟಲಿಂಗವನ್ನು ನೀಡಿದರು,ಗುರು ಲಿಂಗ ಜಂಗಮ ಎಂಬ ತ್ರಿವಿಧವನ್ನು ಹುಟ್ಟು ಹಾಕಿದರು. ವೀರಶೈವ ಎಂಬ ಪದದ ಬಳಕೆ ಯಾರ ವಚನಗಳಲ್ಲೂ ಅಷ್ಟಾಗಿ ಕಂಡು ಬರುವುದಿಲ್ಲವಾದರೂ,ಈ ವಚನದಲ್ಲಿ ಶಿವ ಶರಣರಿಗೆ "ವೀರ"ರಾಗಿ ಇರಬೇಕೆಂದು ಉತ್ತೇಜಿಸುತ್ತಾರೆ .. ಈ ವಚನದಂತೆ ವೀರನಾದ ಶೈವ  "ವೀರಶೈವ" ಆಗಿರಬಹುದೇ ???