Monday 18 February 2013

ವಚನ ಸಿಂಚನ ೬೩:ಆತಿಥ್ಯ

ಏನು ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ  ಹೊಹುದೇ?
ಕುಳ್ಳಿರೆಂದಡೆ ನೆಲಕುಳಿ ಹೊಹುದೇ?
ಒಡನೆ ನುಡಿದಡೆ ಸಿರ,ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ
ಕೂಡಲಸಂಗಮದೇವಯ್ಯಾ !!!
                               -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ..ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ...ಅದೇ ರೀತಿ ಅವರನ್ನು ಕುಳಿತು ಕೊಳ್ಳಲು ಆಹ್ವಾನ ನೀಡಿದರೆ,ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾನೆ...

ಮೂಗ ಕೊಯ್ಯದೆ ಬಿಡುವನೆ ಎಂದರೆ ಅಂಥವರು ಶಿಕ್ಷಾರ್ಹರು ಎಂದು ಹೇಳುತ್ತಾ ಅಂಥವರು ದೇವರ ಒಲುಮೆಗೆ ಪಾತ್ರರಾಗುವುದಿಲ್ಲ ಎಂದು ಬಸವಣ್ಣ ಹೇಳುತ್ತಾರೆ.

ಇವನಾರವ ಎಂದೆನಿಸದೆ,ಇವನಮ್ಮವ ಎಂದೆನಿಸಯ್ಯಾ ಎಂದು ತನ್ನ ಇನ್ನೊಂದು ವಚನದಲ್ಲಿ ಎಲ್ಲ ವರ್ಗದ ಜನರನ್ನು ಆದರದಿಂದ ಕಾಣು  ಎಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ನೀಡಿರುವಂತೆ ಇಲ್ಲಿ ಕೂಡ ಆದರಾತಿಥ್ಯ ಶರಣರ ಗುಣ ಲಕ್ಷಣ ಎಂದು ಸಂಭೋಧಿಸುತ್ತಾನೆ...

2 comments:

  1. ಅತಿಥಿ ಸತ್ಕಾರದ ಬಗೆಗೆ ಬಸವಣ್ಣನವರ ಹಿತವಚನ.

    ReplyDelete
  2. ವಚನಗಳ ವಿಶ್ಲೇಶಣೆ ತುಂಬಾ ಚೆನ್ನಾಗಿದೆ

    ReplyDelete