Monday 30 April 2012

ವಚನ ಸಿಂಚನ ೩೫:ಪೂಜೆ ಮತ್ತು ಕಾಯಕ

ನೆರೆ ಕೆನ್ನೆಗೆ,ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ,ಬೆನ್ನು ಬಾಗಿ
ಅನ್ಯರಿಗೆ ಹಂಗಾದ ಮುನ್ನ,
ಕಾಲ ಮೇಲೆ ಕೈಯನೂರಿ,
ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವ !!!
                                 -ಬಸವಣ್ಣ

ಇಲ್ಲಿ ಬಸವಣ್ಣನವರು ಮನುಷ್ಯನ ಮುಪ್ಪಿನ ಲಕ್ಷಣಗಳನ್ನು ಹೇಳುತ್ತಾ,ಮುಪ್ಪು ಬಂದು ಮೃತ್ಯುವನ್ನು ತಲುಪುವ ಮುಂಚೆ ಕೂಡಲಸಂಗಮದೇವನನ್ನು  ಪೂಜಿಸು ಎಂದು ಹೇಳುತ್ತಾರೆ.ಮುಖದ ಮೇಲೆ ಕೆನ್ನೆ ಮತ್ತು ಗಲ್ಲ ಸುಕ್ಕು ಗಟ್ಟಿದಂತಾಗಿ ಮುಖದ ಛಾಯೆ ಬಾಡುವ ಮುನ್ನ,ಹಲ್ಲುಗಳೆಲ್ಲ ಹೋಗಿ,ಬೆನ್ನು ಗೂನಾಗಿ ಬೇರೆಯವರನ್ನು ಅವಲಂಭಿಸುವ ಮುನ್ನ,ನಡೆಯಲು ಕೋಲು ಹಿಡಿಯುವಂತಾಗುವ ಮುನ್ನ ಲಿಂಗದೆವನನ್ನು ಪೂಜಿಸಬೇಕು ಎಂದು ಹೇಳುತ್ತಾರೆ.
ಇಲ್ಲಿ ಪೂಜೆ ಅಂದರೆ ಕೇವಲ ದೇವರನ್ನು ಪೂಜಿಸುವುದು ಮಾತ್ರವಲ್ಲ,ಅಲ್ಲದೆ ತನ್ನ ಕಾಯಕವನ್ನು ಕೂಡ ಸರಿಯಾದ ಸಮಯದಲ್ಲಿ ಮಾಡಬೇಕು ಎಂದು ಇದರ ಅರ್ಥ.'ಕಾಯಕವೇ ಕೈಲಾಸ' ಎಂದು ಸಾರಿ ಕಲ್ಯಾಣದಲ್ಲಿ 'ಕಾಯಕ ಕ್ರಾಂತಿ'ಯನ್ನೇ ಉಂಟು ಮಾಡಿದ ಬಸವಣ್ಣ,ಭಕ್ತಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಾಯಕಕ್ಕೂ ಕೊಟ್ಟಿದ್ದರು.ಆದ್ದರಿಂದಲೇ ನಾನಾ ಕಾಯಕ ವರ್ಗದವರು ಭಕ್ತಿ ಪ್ರದಾನವಾದ ಮತ್ತು ಸಾಮಾಜಿಕ ಸಮಾನತೆ ಸಾರುತ್ತಿದ್ದ ಅನುಭವ ಮಂಟಪದಲ್ಲಿ ಭಾಗಿಯಾಗಿದ್ದು.
'ಹೊತ್ತು ಹೋಗುವ ಮುನ್ನ ಲಿಂಗವ ಪೂಜಿಸಬೇಕು' ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಇಲ್ಲಿ ಕೂಡ ಪೂಜೆ ಮತ್ತು ಕಾಯಕವನ್ನು ಹೊತ್ತು ಇರುವಾಗಲೇ ಮಾಡಬೇಕು ಎಂದು ಹೇಳುತ್ತಾರೆ.


1 comment:

  1. ೨೩, ೨೪, ೨೫ ಮೂರೂ ಒಳ್ಳೆ ವಚನಗಳು. ಒಳ್ಳೆಯ ಅರ್ಥಗಾರಿಕೆ. ಧನ್ಯವಾದಗಳು :)

    ReplyDelete