Monday 9 April 2012

ವಚನ ಸಿಂಚನ ೩೨:ಏಕದೆವೋಪಾಸನೆ

ಭಕ್ತರ ಕಂಡರೆ ಬೋಳರಪ್ಪಿರಯ್ಯಾ,
ಸವಣರ ಕಂಡರೆ ಬತ್ತಲೆಯಪ್ಪಿರಯ್ಯಾ.
ಹಾರುವರ ಕಂಡರೆ ಹರಿನಾಮವೆಂಬಿರಯ್ಯಾ,
ಅವರವರ  ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ
ತೋರದಿರಯ್ಯಾ
ಕೂಡಲಸಂಗಮದೇವನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ...
                                                        -ಬಸವಣ್ಣ

ಇಲ್ಲಿ ಬಸವಣ್ಣನವರು ಬಹುದೆವೋಪಾಸನೆಯ ಕುರಿತು ಕಟುವಾಗಿ ನುಡಿಯುತ್ತಾರೆ.ಕೆಲವರು ಭಕ್ತರನ್ನು ಕಂಡಾಗ ಅವರಂತೆ ಬೋಳರಾಗುವುದು,ಶ್ರವಣರನ್ನು ಕಂಡರೆ ಅವರಂತೆ ಬೆತ್ತಲಾಗಿ ಅವರ ಅನುಯಾಯಿಗಳಂತೆ ವರ್ತಿಸುವುದು,ಹಾರುವರನ್ನು ಕಂಡಾಗ ಅವರನ್ನು ಓಲೈಸಲು ಹರಿನಾಮ ಭಜನೆ ಮಾಡುವುದು,ಹೀಗೆ ಒಂದೊಂದು ಪಂಗಡದವರು ಕಂಡಾಗ ಅವರನ್ನು ಹಿಂಬಾಲಿಸುವಂತೆ ತೋರಿಕೆ ಪಡಿಸುವುದು ತರವಲ್ಲ ಎಂದು ಹೇಳುತ್ತಾರೆ.ಜಗತ್ತಿನ ಆಗು ಹೋಗುಗಳಿಗೆ ಕಾರಣೀಭೂತನಾದ ಶಿವನ ಸ್ವರೂಪವಾದ ಕೂಡಲಸಂಗಮ ದೇವನನ್ನು ಪೂಜಿಸಿ ಬೇರೆ ದೇವರುಗಳಿಗೆ ಬಾಗುವವರು ಅಜ್ಞಾನಿಗಳು ಎಂದು ಹೇಳುತ್ತಾರೆ.
"ಛಲ ಬೇಕು ಶರಣಂಗೆ ಪರದೈವವನೊಲ್ಲೆನೆಂಬ" ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಮತ್ತು "ದೇವನೊಬ್ಬ ನಾಮ ಹಲವು" ಎಂಬಂತೆ ಈ ವಚನದಲ್ಲಿ ಕೂಡ ಅನ್ಯ ದೇವಗಳ ಪೂಜೆಯ ಬಗ್ಗೆ ತಾತ್ಸಾರ ಮಾಡುತ್ತಾರೆ.

2 comments:

  1. ವ್ಯಷ್ಟಿಯನ್ನೊಪ್ಪದ ಬಸವಣ್ಣ..ಚೆನ್ನಾಗಿದೆ.

    ReplyDelete
    Replies
    1. ಕಿರಣ್ ಅವರೇ,ಹೆಸರಿನಲ್ಲೇ ಶಿವನನ್ನು ಇರಿಸಿ ಕೊಂಡಿರುವ ನೀವು ವಚನಗಳನ್ನು ಓದಿ ಪ್ರತಿಕ್ರಿಯಿಸಿವುದು ತುಂಬ ಇಷ್ಟ ಆಯಿತು... ಹೀಗೆ ಓದುತ್ತಿರಿ.. ಇನ್ನಷ್ಟು ಬರೆಯಲು ಇದೆ ಸ್ಪೂರ್ತಿ... ಧನ್ಯವಾದಗಳು..

      Delete