Monday 4 February 2013

ವಚನ ಸಿಂಚನ ೬೧: "ವೀರ" ಶೈವ

 ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
ಎಲುದೋರೆ ಸರಸವಾಡಿದಡೆ   ಸೈರಿಸಬೇಕಯ್ಯಾ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕ ಒಲಿವ ಕೂಡಲಸಂಗಮದೇವಾ !!!
                       -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು,ಶಿವನನ್ನು ಒಲಿಸಿಕೊಳ್ಳಬೇಕಾದರೆ ವೀರತೆಯ,ಶೌರ್ಯತೆಯ ಪ್ರದರ್ಶನ ಕೆಲವೊಮ್ಮೆ ಅನಿವಾರ್ಯ ಆಗಬಹುದು ಎಂದು ವಿವರಿಸುತ್ತಾರೆ...ಪ್ರತಿಯೊಬ್ಬ ಶಿವಶರಣನು ವೀರನ ಕೈಯ ಖಡ್ಗದಂತಿರಬೇಕು, ಚರ್ಮ ಸುಲಿದು ಮೂಳೆ ಕಾಣಿಸುವಂತಿದ್ದರೂ ಅದನ್ನು ಸೈರಿಸಿಕೊಳ್ಳುವಂತಿರಬೇಕು,ಯುದ್ಧದಲ್ಲಿ ರುಂಡ ಮುಂಡ  ಬೇರೆ ಬೇರೆಯಾಗಿ ,ತಲೆಯು ವೀರ ಯೋಧನ ಹಾಗೆ "ಹರ ಹರ ಮಹಾದೇವಾ" ಎಂದು ಬೊಬ್ಬೆ ಇಟ್ಟಾಗ ಕೂಡಲಸಂಗಮದೇವ ಒಲಿಯುತ್ತಾನೆ ಎಂದು ಬಸವಣ್ಣ ಹೇಳುತ್ತಾರೆ.

ಈ ವಚನದಲ್ಲಿ ಗಮನಿಸಬೇಕಾದ ಒಂದು ಅಂಶ ಅಂದರೆ,೧೨ನೆ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಸಾಮಾಜಿಕ ಪರಿಸ್ಥಿತಿ,ಕಲ್ಯಾಣ ಕ್ರಾಂತಿಯ ಹಿನ್ನೆಲೆಯಲ್ಲಿ ಶಿವ ಶರಣರಿಗೆ ಬಿಜ್ಜಳ ಅರಸನ ಕಡೆಯವರಿಂದ ಉಪಟಳ ಬಹಳ ಇತ್ತು..ಆದ್ದರಿಂದ ತಮಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಬರಬಹುದೆಂಬ ನಿರೀಕ್ಷೆಯಲ್ಲಿ ಬಸವಣ್ಣ ಕಲ್ಯಾಣದ ಶರಣರಿಗೆ ಎಚ್ಚರಿಕೆ ನೀಡಿದಂತಿದೆ ಈ ವಚನ...ಹರಳಯ್ಯ ಮತ್ತು ಮಧುವರಸನನ್ನು ಕೊಂದಿದ್ದು ಶರಣರಿಗೆ ನೀಡಿದ ತೊಂದರೆಯ ಒಂದು  ನಿದರ್ಶನ..

ಇನ್ನೊಂದು ಸಂಗತಿ ಅಂದರೆ ಶಿವನ ಆರಾಧಕರಾದ ಶೈವರು ಬಸವಣ್ಣನ ಕಾಲಕ್ಕೂ ಹಿಂದಿನಿಂದಲೂ ಇದ್ದರು ಮತ್ತು ಆ ಧರ್ಮವನ್ನು ಬಸವಣ್ಣ ಕೆಲವು ರೂಪುರೇಷೆಗಳಿಂದ ಪುನಶ್ಚೇತನಗೊಳಿಸಿದರು ಎಂದರೆ ತಪ್ಪಾಗಲಾರದು..ಇಷ್ಟಲಿಂಗವನ್ನು ನೀಡಿದರು,ಗುರು ಲಿಂಗ ಜಂಗಮ ಎಂಬ ತ್ರಿವಿಧವನ್ನು ಹುಟ್ಟು ಹಾಕಿದರು. ವೀರಶೈವ ಎಂಬ ಪದದ ಬಳಕೆ ಯಾರ ವಚನಗಳಲ್ಲೂ ಅಷ್ಟಾಗಿ ಕಂಡು ಬರುವುದಿಲ್ಲವಾದರೂ,ಈ ವಚನದಲ್ಲಿ ಶಿವ ಶರಣರಿಗೆ "ವೀರ"ರಾಗಿ ಇರಬೇಕೆಂದು ಉತ್ತೇಜಿಸುತ್ತಾರೆ .. ಈ ವಚನದಂತೆ ವೀರನಾದ ಶೈವ  "ವೀರಶೈವ" ಆಗಿರಬಹುದೇ ???



 

2 comments:

  1. ತುಂಬಾ ಚೆನ್ನಾಗಿದೆ ಗಿರಿ ಅರ್ಥ...

    ReplyDelete
  2. ಹಲವು ಬಾರಿ ಧರ್ಮ ಸಂಸ್ಥಾಪನೆಯ ಹಾದಿಯಲ್ಲಿ ಬರುವ ಅಸಂಗತ ತೊಡಕುಗಳನ್ನು ನಿವಾರಿಸಲು ಪರಾಕ್ರಮವನ್ನು ಮೆರೆಯಬೇಕಾಗಬಹುದು.

    ಆ ನಿಟ್ಟಿನಲ್ಲಿ ಈ ವೀರ ಮತ್ತು ಬಸವಣ್ಣವವರ ವಚನ ಪ್ರಸ್ತುತ.

    ReplyDelete