Sunday 18 March 2012

ವಚನ-ಸಿಂಚನ ೨೯:ಅಂತಃಕರಣ

ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲ ನಡೆದನಾ ಸುಂಕಕ್ಕಂಜಿ
ಕಳವೆಯೆಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥಾ....!
                                  -ಜೇಡರ ದಾಸಿಮಯ್ಯ

ಈ ವಚನದಲ್ಲಿ ದೃಢತೆ ಇಲ್ಲದ ಮನಸ್ಸಿನ ಕಳವಳ ಮತ್ತು ಅಂತ ಒಂದು ಮನಸ್ಸಿನ ತೊಳಲಾಟ ಇಲ್ಲಿ ವ್ಯಕ್ತವಾಗಿದೆ  ..ಒಬ್ಬ ರೈತ ತಾನು ಬೆಳೆದ ಭತ್ತವನ್ನು ಮಾರುಕಟ್ಟೆಗೆ ಸಾಗಿಸುವಾಗ ತೆತ್ತಬೇಕಾದ  ಅನಿವಾರ್ಯವಾದ ಸುಂಕವನ್ನು ತಪ್ಪಿಸಲು ರಾತ್ರಿಯಿಡೀ ನಡೆದು ಹೋಗುತ್ತಾನೆ.ಸುಂಕ ತಪ್ಪಿಸಿಕೊಳ್ಳಲು ಹೋಗಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನೇ ಕಳೆದು ಕೊಳ್ಳುತ್ತಾನೆ.ಇದು ಒಂದು ರೀತಿಯ ಮೂರ್ಖತನವಾದರೆ,ಇನ್ನೊಂದು ರೀತಿಯಲ್ಲಿ ಅಂತಃಕರಣ ಶುದ್ಧವಿಲ್ಲದವನ ಮನಸ್ಸು ಮತ್ತು ಭಕ್ತಿ.

ಇಲ್ಲಿ ಹರಿದ ಗೋಣಿ ಅಂದರೆ ತನ್ನನ್ನು ತಾನು ಅರಿಯದೆ ಅಜ್ಞಾನದಲ್ಲಿ,ಕತ್ತಲೆಯಲ್ಲಿ ಜೀವನ ಸಾಗಿಸುತ್ತಿರುವ ಒಂದು ಮನಸ್ಸು ಮತ್ತು ಸುಂಕಕ್ಕೆ ಅಂಜಿ ರಾತ್ರಿಯೆಲ್ಲ ನಡೆಯುವುದು ಅಂದರೆ ತನ್ನನ್ನು ತಾನು ಅರಿಯಲು ಪ್ರಯತ್ನಿಸದೆ ಇರುವುದು ಎಂದು ಭಾವಿಸಬಹುದು.ಬರಿಯ ಗೋಣಿ ಉಳಿಯಿತ್ತು ಅಂದರೆ ಕೇವಲ ದೇಹ ಉಳಿದಿತ್ತು ಎಂದು ಅರ್ಥೈಸಬಹುದು.. ಅಳಿಮನದವನ ಭಕ್ತಿ ಅಂದರೆ ಯಾವುದೇ ಒಂದು ಕಡೆ ದಿಟ್ಟ ಗುರಿ ಇಲ್ಲದ ಚಂಚಲ ಮನಸ್ಸಿನವನು,ಅವನಲ್ಲಿ ಭಕ್ತಿಯೂ ಕೂಡ ಹಾಗೆ ದೃಢತೆ ಇರುವುದಿಲ್ಲ ಎಂದು ಜೇಡರ(ದೇವರ) ದಾಸಿಮಯ್ಯನವರು ಹೇಳುತ್ತಾರೆ.

2 comments:

  1. ದಾರಿಯಲ್ಲಿ ಹೊತ್ತು ತಿರುಗಿದ ಲಾಭವೂ ಇಲ್ಲ, ಧಾನ್ಯ ಉಳಿಯಲೂ ಇಲ್ಲ.. ಒಳ್ಳೆ ವಚನ. ಧನ್ಯೋಸ್ಮಿ :)

    ReplyDelete
    Replies
    1. ಹೌದು.. ಆಸೆ ಜಾಸ್ತಿ ಆದರೆ ಅದೇ ಗತಿ ಅಲ್ಲವೇ? ನಿಮಗೂ ಧನ್ಯೋಸ್ಮಿ ಸರ್ ...

      Delete