Monday 29 July 2013

ವಚನ ಸಿಂಚನ ೬೮ :ವೇಷ ಡಂಬಕರು

ಕಳ್ಳಗಂಜಿ ಕಾಡ  ಹೊಕ್ಕಡೆ ಹುಲಿ ತಿಂಬುದ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೇ ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ !!
                                           - ಅಲ್ಲಮಪ್ರಭು

ಈ ವಚನದಲ್ಲಿ ಅಲ್ಲಮಪ್ರಭು ಅವರು ಮನುಷ್ಯ ಹೇಗೆ ಕಷ್ಟವನ್ನು ಎದುರಿಸಲಾಗದೆ ಮಾಡಿ ಮತ್ತೆ ಕೊನೆಗೆ ಇನ್ನೊಂದು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡು ಬಳಲುತ್ತಾನೆ ಎಂಬುದನ್ನು ಕೆಲವು ನಿದರ್ಶನಗಳ ಮೂಲಕ ವಿವರಿಸುತ್ತಾರೆ.

ಕಳ್ಳನಿಗೆ ಹೆದರಿಕೊಂಡು ಕಾಡಿನ ಒಳಗೆ ಅಡಗಿದರೆ ಹುಲಿಯ ಬಾಯಿಗೆ ಆಹಾರವಾಗುತ್ತಾನೆ..  ಆ ಹುಲಿಗೆ ಹೆದರಿ ಹುತ್ತದಲ್ಲಿ ಅಡಗಿದರೆ,ಅಲ್ಲಿ ಹಾವಿನ  ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.. ತನಗೆ ಬಂದ  ಕಷ್ಟವನ್ನು ಎದುರಿಸಬಹುದಾಗಿದ್ದರೂ ತನ್ನ ಪಲಾಯನವಾದದಿಂದ ಮತ್ತೊಂದು ದೊಡ್ಡ ಕಷ್ಟದಲ್ಲಿ ಸಿಲುಕಿ ನಲುಗುತ್ತಾನೆ..

ಕೊನೆಗೆ ಸಾವಿಗೆ ಅಂಜಿ ದೇವರ ನೆನೆಯುತ್ತಾ ಭಕ್ತನಾದರೆ ತನ್ನ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ ,ಬದಲಾಗಿ ತನ್ನ ಕರ್ಮಗಳೇ ಅವನನ್ನು ಕೊಲ್ಲುತ್ತದೆ. ಇಲ್ಲಿ ಭಕ್ತನಾದವನನ್ನು ವೇಷಡಂಬಕ ಎಂದು ಕರೆಯುತ್ತಾ, ಅಂಥವರ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾರೆ..

2 comments:

  1. ಮನುಷ್ಯ ಯಾವಾಗಲೂ ಸ್ವಾರ್ಥಕ್ಕೇ ದೇವರ ಮೊರೆ ಹೋಗುವುದು ಎಂಬುದನ್ನ ಅಲ್ಲಮರು ಅರ್ಥಪೂರ್ಣವಾಗಿ ತಿಳಿಸಿದ್ದಾರೆ ಈ ವಚನದಲ್ಲಿ

    ReplyDelete
  2. ಅರ್ಥಪೂರ್ಣ ವಿವರಣೆ

    ReplyDelete