Monday 8 April 2013

ವಚನ ಸಿಂಚನ ೬೬: ಸಜ್ಜನರ ಸಂಗ

ಹದತಪ್ಪಿ ಕುಟ್ಟಲು ನುಚ್ಚಲ್ಲದೇ ಅಕ್ಕಿಯಿಲ್ಲ
ವೃತಹೀನನ ನೆರೆಯೆ ನರಕವಲ್ಲದೇ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದಡೆ
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ...
                                         -ಸೂಳೆ ಸಂಕವ್ವೆ

ಈ  ವಚನದಲ್ಲಿ ಮಾಡುವ ಕೆಲಸ ಹೇಗೆ ಹಿತವಾಗಿರಬೇಕು ಮತ್ತು ಎಂಥವರ ಸಂಗ ಮಾಡಬೇಕು ಎಂದು ಸಂಕವ್ವೆ ಹೇಳುತ್ತಾಳೆ ... ಅಕ್ಕಿಯನ್ನು ಪಡೆಯುಬೇಕೆಂದರೆ ಬತ್ತವನ್ನು ಒನಕೆಯಿಂದ ಕುಟ್ಟಿ ಸಿಪ್ಪೆಯನ್ನು ತೆಗೆದು ಅಕ್ಕಿಯನ್ನು ಪಡೆಯಬೇಕು ... ಬತ್ತವನ್ನು ಒಂದು ಹದದಲ್ಲಿ ಕುಟ್ಟಿದರೆ ಮಾತ್ರ ಅಕ್ಕಿ ಸಿಗುತ್ತದೆ.. ಒನಕೆ ಇದೆ ಎಂದು ಜೋರಾಗಿ  ಕುಟ್ಟಿದರೆ ನಮಗೆ ಸಿಗುವುದು ನುಚ್ಚು ಮಾತ್ರ .. ಅದೇ ರೀತಿ 'ಸಾರ ಸಜ್ಜನರ ಸಂಗವದು ಲೇಸು ಕಂಡಯ್ಯಾ' ಎನ್ನುವ ಹಾಗೆ,ನಾವು ಯಾರ ಸಂಗವನ್ನು ಮಾಡಬೇಕು ಎಂಬುದನ್ನು ಅರಿತಿರಬೇಕು .. ಒಳ್ಳೆಯ ವಾತವರಣದಲ್ಲಿದ್ದರೆ ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಒಳ್ಳೆಯದು ಎಂದು ಹೇಳುತ್ತಾಳೆ .. ಅದೇ ರೀತಿ ಹೇಳುತ್ತಾ ,ತಿಳಿಯದೆ ತಪ್ಪು ಮಾಡಿದರೆ ಅದಕ್ಕೆ ಕ್ಷಮೆ ನೀಡಬಹುದು .ಅದರೆ  ತಿಳಿದೂ ತಿಳಿದು ತಪ್ಪು ಎಸಗಿದರೆ,ಕಾದ ಕತ್ತಿಯಲಿ ಕಿವಿ ಕೊಯ್ವರು ಎಂದರೆ ಅವರು ಶಿಕ್ಷೆಗೆ ಒಳಪಡುತ್ತಾರೆ ಎಂದು ಎಚ್ಚರಿಸುತ್ತಾಳೆ... ಅರಿತು ಕೂಡ ದುಃಸಂಗ ಮಾಡಿದರೆ ಅವರು ಎಂದಿಗೂ ಸನ್ಮಾರ್ಗದಲ್ಲಿ ನಡೆಯುವುದಿಲ್ಲ ..
ವಿಚಾರವಂತರ,ಅನುಭಾವಿಗಳ,ಶರಣರ  ಸಂಗ ಮಾಡಿದರೆ ಅಕ್ಕಿಯನ್ನು ಪಡೆದಂತೆ ಜೀವನ ರಸಮಯವಾಗಬಹುದು ,ಇಲ್ಲದಿದ್ದರೆ ನುಚ್ಚು ಪಡೆದಂತೆ ಕಷ್ಟಕರವಾಗಬಹುದು ಎಂದು ಸಂಕವ್ವೆ ಹೇಳುತ್ತಾಳೆ ..


3 comments:

  1. ತುಂಬಾ ಚೆನ್ನಾಗಿದೆ ಅರ್ಥ

    ReplyDelete
  2. ಹೆಚ್ಚು ಪ್ರಚಳಿತಕ್ಕೆ ಇನ್ನೂ ಬಾರದ ಸೂಳೆ ಸಂಕವ್ವೆಯಂತವರ ವಚನಗಳನ್ನು ಹೆಕ್ಕಿ ನಮಗಾಗಿ ತಂಡ ನಿಮಗೆ ಶರಣು. ತುಂಬಾ ಅರ್ಥಪೂರ್ಣ ವಚನ. ಈಕೆಯ ಬಗ್ಗೆ ನಾನು ಅಭ್ಯಸಿಸಬೇಕಿದೆ. ಆಕೆಯ ಅಂಕಿತವೇ ವಿಭಿನ್ನ "ನಿರ್ಲಜ್ಜೇಶ್ವರಾ' ಅದರಲ್ಲಿರುವ ಆಕೆಯ ಬಂಡಾಯ ಮನಸ್ಥಿತಿ ಆಕೆಯ ಹಿನ್ನಲೆಯನ್ನು ತಿಳಿಯಲು ಪ್ರೇರೇಪಿಸುತ್ತದೆ.

    ReplyDelete
  3. badarinath avarige dhanyavadagalu.
    ವಚನಕಾರರ ಬಗ್ಗೆ ತುಂಬಾ ಪುಸ್ತಕಗಳನ್ನು ಓದಿದ್ದೇನೆ. ಶರಣ ಶರಣೆಯರ ಜೀವನ ಚರಿತ್ರೆ ಯಾವಾಗಲು ನನ್ನನ್ನು ಬೆಳೆಸಿವೆ. ಮನೆಯಲ್ಲಿ ಈಗಲೂ ಕೂಡ ತುಂಬಾ ಪುಸ್ತಕಗಳು ಇವೆ.
    nimma blog follow madta iddene.

    ReplyDelete