Monday 4 March 2013

ವಚನ ಸಿಂಚನ ೬೪:ಹೆಣ್ಣು,ದೈವ ಸ್ವರೂಪಿಣಿ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ
                               -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ಧರಾಮ ಪುರಾಣದ ಕೆಲವು ನಿದರ್ಶನಗಳ ಮೂಲಕ ಹೆಣ್ಣಿನ ಘನತೆಯನ್ನು ಹೆಚ್ಚಿಸುತ್ತಾನೆ. ಶಿವ ತನಗೆ ಮತ್ತು ಹಲವು ದೇವರುಗಳಿಗೆ ದೇವತೆಗಳನ್ನು ಸೃಷ್ಟಿ ಮಾಡಿದ.. ಗಂಗೆ ಶಿವನ ತಲೆಯ ಮೇಲೆ ಕೂತಳು, ಪಾರ್ವತಿ ಶಿವನ ತೊಡೆಯ ಮೇಲೆ ಸಿಂಗರಿಸಿದಳು. ಸರಸ್ವತಿ ಬ್ರಹ್ಮನ ನಾಲಗೆಯಲ್ಲಿ ಲೀನವಾದಳು. ಲಕ್ಷ್ಮಿ ವಿಷ್ಣುವಿನ ಎದೆಗೆ ಒರಗಿಕೊಂಡಳು. ಇಲ್ಲಿ ದೇವರುಗಳೇ ಹೆಣ್ಣಿನ ಸಂಗವನ್ನು ಬಯಸುವಾಗ. ಇನ್ನು ಹೆಣ್ಣು, ಅದರಲ್ಲೂ ಐಹಿಕ ಹೆಣ್ಣು, ಕೇವಲ ಗಂಡನ ಭೋಗದ ವಸ್ತು ಆಗುವುದಿಲ್ಲ ಅಥವಾ ದೆವ್ವ,ಭೂತಗಳ ಸ್ವರೂಪವಲ್ಲ, ಬದಲಾಗಿ ಆಕೆ ದೈವ ಸ್ವರೂಪ ಎಂದು ಸಿದ್ಧರಾಮ ಹೇಳುತ್ತಾನೆ.ಶರಣರು ಹೆಣ್ಣನ್ನು ಉಚ್ಚ ಸ್ಥಾನದಲ್ಲಿಟ್ಟು ಗೌರವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ..

ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಃ ಎಂಬ ಹಾಗೆ ಇಲ್ಲಿ ಸಿದ್ಧರಾಮ ಕೂಡ ಹೆಣ್ಣು ಪೂಜನೀಯ ಎಂದು ಹೇಳುತ್ತಾನೆ ....

(ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ  ಈ ಸಂಚಿಕೆಯನ್ನು ಅಂಥ ದೈವ ಸ್ವರೂಪಿ ಹೆಣ್ಣಿಗೆ ಗೌರವದಿಂದ ಸಮರ್ಪಣೆ)

1 comment:

  1. ಹೆಣ್ಣು ಮಾರಿಯಲ್ಲ ಹೆಣ್ಣು ದೇವತೆ ಎಂಬುದನ್ನು ಅಂದು ೧೨ನೇ ಶತಮಾನದ ಶರಣರೆಲ್ಲ ಹೆಣ್ಣಿಗೆ ಸಮಾನ ಸ್ಥಾನವನ್ನು ಕೊಟ್ಟರು. ಅಂದು ದೊರಕಿದ ಶ್ರೇಷ್ಟತೆ ಇಂದಿಗೂ ಮಾದರಿ
    ವಚನದ ಅರ್ಥ ತುಂಬಾ ಚೆನ್ನಾಗಿ ಬರೆದಿದ್ದೀಯ ಗಿರಿ.. ಹೀಗೇ ಮುಂದುವರಿಯಲಿ

    ReplyDelete