Monday 22 October 2012

ವಚನ ಸಿಂಚನ ೫೪:ಗುರು ಶಿಷ್ಯ ಸಂಭಂದ

ಗುರು-ಶಿಷ್ಯ ಸಂಬಂಧವೆನೆಂದುಪಮಿಸುವೆ?
ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು
ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು
ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು
ರೂಪಿನ ನೆಳಲಿನ ಅಂತರಂಗದಂತಿರಬೇಕು
ಕೂಡಲ ಚನ್ನಸಂಗಯ್ಯಾ ಇದು ಕಾರಣ
ದರ್ಪಣವು ದರ್ಪಣಕೆ ತೋರಿದಂತಿರಬೇಕು..
                               -ಚೆನ್ನ ಬಸವಣ್ಣ


ಈ ವಚನದಲ್ಲಿ ಚೆನ್ನ ಬಸವಣ್ಣ ಗುರು ಶಿಷ್ಯ ಸಂಭಂದ ಹೇಗಿರಬೇಕು ಎಂಬುದನ್ನು ವಿವರಿಸುತ್ತಾರೆ.ಗುರು ಶಿಷ್ಯ ಸಂಭಂದ ಎಲ್ಲ ಧರ್ಮಗಳನ್ನು,ಜನಾಂಗಗಳನ್ನು,ಲಿಂಗ ಭೇಧವನ್ನು ಮೀರಿ ನಿಂತಿರುವಂತದ್ದು.

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ,ಅದೇ ರೀತಿ ಗುರು ತನ್ನ ಶಿಷ್ಯನಿಗೆ ತನ್ನ ಜ್ಞಾನವನ್ನು ಧಾರೆ ಎರೆದರೆ ಅದು ಕೂಡ ಆತನ ಬದುಕಿನ ದೀಪ ಹಚ್ಚಿದಂತೆ.ಅದೇ ರೀತಿ ಕನ್ನಡಿ ಒಳಗಿನ ಪ್ರತಿಬಿಂಬ ಹೇಗೆ ಸ್ಪಷ್ಟವಾಗಿರುತ್ತದೋ ಅದೇ ರೀತಿ ಗುರು ಶಿಷ್ಯರ ನಡುವಿನ ಸಂಭಂದ ಇರಬೇಕು,ಅಂತ ಗೆಳೆತನ ಬೆಸೆದಿರಬೇಕು,ಅಂದರೆ ಗುರು ಆದವನು ಕೂಡ ಶಿಷ್ಯನಿಂದ ಕಲಿಯಬೇಕಾದ್ದು ಬಹಳ ಇದೆ ಎಂಬುದನ್ನು ಇಲ್ಲಿ ವಿವರಿಸಬಹುದು.ಸ್ಫಟಿಕದೊಳಗೆ ರತ್ನವು ಅಡಗಿರುವುದು ಹೇಗೆ ಪಾರದರ್ಶಕತೆ ಇಂದ ಕೂಡಿದೆಯೋ ಅದೇ ರೀತಿ ಗುರುವು ತನ್ನ ಶಿಷ್ಯನಿಗೆ ಅಷ್ಟೇ ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಭೋಧಿಸಬೇಕು.ತನ್ನ ನೆರಳಿನ ಅಂತರಂಗದಲ್ಲಿ ತಾನೇ ಇರುವ ಹಾಗೆ ಗುರುವಿನ ಅಂತರಂಗದಲ್ಲಿ ಶಿಷ್ಯ ಮತ್ತು ಶಿಷ್ಯನ ಅಂತರಂಗದಲ್ಲಿ ಗುರುವು ಇರಬೇಕು ಎಂದು ಹೇಳುತ್ತಾ ದರ್ಪಣಕೆ ದರ್ಪಣ ತೋರಿದಂತೆ ಅಂದರೆ ಕನ್ನಡಿಯಲ್ಲಿ ನಮ್ಮದೇ ಪ್ರತಿಬಿಂಬ ಕಾಣುವ ಹಾಗೆ ಗುರು ಆದವನು ಶಿಷ್ಯನಿಂದ ಶಿಷ್ಯ ಗುರುವಿನಿಂದ ಕಲಿಯಬೇಕು ಎಂದು ಅರ್ಥೈಸಿಕೊಳ್ಳಬಹುದು.ಅಲ್ಲದೆ ತಪ್ಪಿದರೆ ಒಬ್ಬರಿಗೊಬ್ಬರು ತಿದ್ದಿ ತೀಡುವಂತಿರಬೇಕು ಎಂಬುದನ್ನು ಅರಿಯಬೇಕು ಎಂದು ಚೆನ್ನ ಬಸವಣ್ಣ ಹೇಳುತ್ತಾನೆ.
 

3 comments:

  1. ಸಿದ್ದರಾಮೇಶ್ವರನ ವಚನ ಮತ್ತು ಬಸವಣ್ಣನ ಈ ವಚನ. ಎರಡೂ ಚೆನ್ನಾಗಿದೆ. ಒಳ್ಳೆಯ ಅರ್ಥವಿವರಣೆ ಕೂಡ.

    ReplyDelete
  2. ಒಳ್ಳೆಯ ನೀತಿ ಬೋಧಕ ವಚನ.

    ReplyDelete
  3. ಬಹಳ ಒಳ್ಳೆಯ ವಚನ ರಾಯರೇ

    ReplyDelete